Wednesday, 10 December 2014

ಡಾ.ಡಿ.ಎಸ್.ಚೌಗಲೆ, ನಾಟಕಕಾರರು: ಸಂಸ ರಂಗ-ಸಾಹಿತ್ಯ ಪುರಸ್ಕಾರ-2014’

          ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ’ಕಸ್ತೂರಬಾ’, ’ಉಧ್ವಸ್ಥ’ ಅವರ ಬಹುಚರ್ಚಿತ ನಾಟಕಗಳು. ’ಉಚಲ್ಯಾ’, ಇತ್ತೀಚೆಗೆ ಬಂದ ರೂಪಾಂತರ ನಾಟಕ. ೧೯೯೮ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ’ಗಾಂಧಿ ವರ್ಸಸ್ ಗಾಂಧಿ’, ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವುಂಟು ಮಾಡಿತು. ’ಗಾಂಧಿ-ಅಂಬೇಡ್ಕರ್’, ’ಪೇಯಿಂಗ್ ಗೆಸ್ಟ್’,’ಕಿರುವಂತ’, ’ಚದುರಂಗ ಮತ್ತು ಕತ್ತೆ’, ’ಶುದ್ಧವಂಶ’ ಇವರ ಇತರ ಅನುವಾದಿತ ನಾಟಕಗಳು. ’ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಈಚೆಗೆ ಬಂದ ಕೃತಿ. ’ನೆರಳುಗಳು’ (ಕಾದಂಬರಿ), ’ನಿನ್ನ ಮೇಲೆ ಸಿಟ್ಟಿಲ್ಲ ಮಾಯಿ’, ಆಯ್ದ ಮರಾಠಿ ಕತೆಗಳು, ’ಮರಾಠಿ ಕೈದಿಗಳ ಕವಿತೆಗಳು’ಇವು ಪ್ರಮುಖ ಅನುವಾದಿತ ಕೃತಿಗಳು.
’ವಾರಸಾ’, ’ಒಡಲ ಉರಿಯ ಹೊತ್ತು’, ಚೌಗಲೆ ಕತೆಗಳು’ ಮತ್ತು ’ಜಂಗು ಹಿಡಿದ ಬ್ಲೇಡು’ ಅವರ ಕಥಾ ಸಂಕಲನಗಳು. ನಟನ ತಂಡದ’ಗಾಂಧಿ-ಅಂಬೇಡಕರ’೧೦೦ ನೇ ಪ್ರಯೋಗ ಕಂಡಿದೆ. ಈ ವರ್ಷದ ನೀನಾಸಮ್ ತಿರುಗಾಟದಲ್ಲಿ ’ಗಾಂಧಿ ವಿರುದ್ಧ ಗಾಂಧಿ’ ಪ್ರಯೋಗ ಕಾಣುತ್ತಿದೆ. ’ದಿಶಾಂತರ’ವು ಮರಾಠಿ,ಇಂಗ್ಲೀಷ್ ಗೆ ಅನುವಾದಗೊಂಡಿದೆ.ಕನ್ನಡದಲ್ಲಿ ಏಳು ಆವೃತ್ತಿ ಕಂಡಿದೆ.ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬಿ.ಎ ಕನ್ನಡ ಮೊದಲನೆ ಸೆಮಿಸ್ಟರ್ ಗೆ ಪಠ್ಯವಾಗಿದೆ. ’ಗಾಂಧಿ ವಿರುದ್ಧ ಗಾಂಧಿ’ ನಾಟಕವು ಬೆಂಗಳೂರು ವಿ.ವಿ. ಎಮ್.ಎ ಗೆ ಪಠ್ಯವಾಗಿದೆ.ರಂಗಭೂಮಿ ಹಾಗು ಚಿತ್ರಕಲೆಗೆ ಸಂಬಂಧಿಸಿದಂತೆ ಸೇರಿ ೨೫ ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.ಚಿತ್ರಕಲಾವಿದರಾದ ಇವರ ಪ್ರಮುಖ ಚಿತ್ರಕಲಾ ಪ್ರದರ್ಶನಗಳು ಬೆಂಗಳೂರು, ಮುಂಬೈ, ಪುಣೆ, ಕೊಚ್ಚಿನ್, ಚೆನ್ನೈ ಹಾಗೂ ಹೈದರಾಬಾದಿನಲ್ಲಿ ನಡೆದಿವೆ. ಚಿತ್ರಕಲೆ, ರಂಗಭೂಮಿ ಕುರಿತು ಕೃತಿಗಳನ್ನು ರಚಿಸಿರುವ ಅವರಿಗೆ ಕರ್ನಾಟಕ ನಾಟಕ ಅಕಾಡಮಿಯ ’ನಾಟಕಕಾರ ಪ್ರಶಸ್ತಿ’, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಿಶಾಂತರ ನಾಟಕಕ್ಕೆ ಪ್ರತಿಷ್ಠಿತ ’ಚದುರಂಗ’ ಪ್ರಶಸ್ತಿ ಮತ್ತು ’ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ’ ಸಂದಿವೆ. ಕನ್ನಡ-ಮರಾಠಿ ರಂಗಭೂಮಿ ಸೇವೆಗೆ ಮುಂಬೈ ಕರ್ನಾಟಕ ಸಂಘದ ’ವರದರಾಜ ಆದ್ಯ’ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ದಿಶಾಂತರ ನಾಟಕವು ಮರಾಠಿ ಭಾಷೆಗೆ ಅನುವಾದಗೊಂಡಿದೆ. ’ಕನ್ನಡ-ಮರಾಠಿ ಆಧುನಿಕ ರಂಗಭೂಮಿ: ತೌಲನಿಕ ಅಧ್ಯಯನ’ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿದೆ. ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ರಂಗಾಯಣ ರಂಗಸಮಾಜದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

https://www.facebook.com/pages/Kannada-Rangabhoomi

No comments:

Post a Comment