Friday, 12 December 2014

ಪ್ರದರ್ಶನಗಳು.....

                                                                
 ದಿನಾಂಕ 13-12-2014 ಶನಿವಾರ
ಸ್ಪಂದನ(ರಿ) ಬೆಳಲಕಟ್ಟೆ ಕಲಾತಂಡ ಅಭಿನಯದ ಡಾ. ಚಂದ್ರಶೇಖರ ಕಂಬಾರರ ಕಾದಂಬರಿ ಆಧರಿತ ನಾಟಕ 'ಜೀಕೆ ಮಾಸ್ತರರ ಪ್ರಣಯ ಪ್ರಸಂಗ'
ನಿರ್ದೇಶನ: ಅಜಯ್ ಗೌಡ ನೀನಾಸಂ
ಸ್ಥಳ: ಸುವರ್ಣ ಸಂಸ್ಕ್ರತಿ ಭವನ, ಶಿವಮೊಗ್ಗ. ಸಂಜೆ 6.30ಕ್ಕೆ
ಪ್ರವೇಶ ಉಚಿತ













ಹೊಂಗಿರಣ(ರಿ) ಶಿವಮೊಗ್ಗ ಅರ್ಪಿಸುವ ಕಲಾ ಗಂಗೋತ್ರಿ, ಬೆಂಗಳೂರು ಕಲಾತಂಡ ಅಭಿನಯದ "ಮೈಸೂರು ಮಲ್ಲಿಗೆ"
ನಿರ್ದೇಶನ: ಡಾ. ಬಿ.ವಿ.ರಾಜಾರಾಂ
ದಿನಾಂಕ: 14-12-2014 ಭಾನುವಾರ
ಸ್ಥಳ: ಸುವರ್ಣ ಸಂಸ್ಕ್ರತಿ ಭವನ, ಶಿವಮೊಗ್ಗ. ಸಂಜೆ 6.30ಕ್ಕೆ
ಟಿಕೆಟ್ ದರ- 30/- ಮಾತ್ರ



ಶರೀಫ.....


ಏಕತಾರಿ, ಮೈಸೂರು ಕಲಾ ತಂಡ ಅಭಿನಯಿಸುತ್ತಿರುವ ಮಂಜುನಾಥ ಬೆಳೆಕೆರೆ ರವರ 'ಶರೀಫ' ನಾಟಕ
ನಿರ್ದೇಶನ: ದಿನೇಶ್ ಚಿಮ್ಮಾರಿಗೆ ನೀನಾಸಂ
ದಿನಾಂಕ: 14-12-2014, ಭಾನುವಾರ
ಸ್ಥಳ: ಕಲಾಮಂದಿರ, ಮೈಸೂರು

"ಸಕಲಕಲಾವಲ್ಲಭ"

ರವಿಶಂಕರ್ ರವರೊಂದಿಗೆ ಪದ್ಮಾ ಶಿವಮೊಗ್ಗ.......

ಸಂಗ್ರಹ: ವಿಜಯ ಕರ್ನಾಟಕ ದಿನ ಪತ್ರಿಕೆ...

ಮಕ್ಕಳೊಂದಿಗೆ ರಂಗ ಪಯಣ....ಡಾ. ಶ್ರೀಪಾದ ಭಟ್

ಡಾ. ಶ್ರೀಪಾದ ಭಟ್ ರವರ ಕೆಲವು ಸಿಹಿ ನೆನಪುಗಳು....

ಸಂಗ್ರಹ: ಪ್ರಜಾವಾಣಿ ದಿನ ಪತ್ರಿಕೆ....

Wednesday, 10 December 2014

ಜಿ.ಎನ್.ಮೋಹನ್: ‘ಸಂಸ ರಂಗ- ಮಾಧ್ಯಮ ಪುರಸ್ಕಾರ-2014’

ರಂಗಭೂಮಿ ವಿಷಯವನ್ನೇ ಪದವಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಜಿ ಎನ್ ಮೋಹನ್ ಅವರು ಪ್ರಥಮ Rank ಮತ್ತು ಎರಡು ಸ್ವರ್ಣ ಪದಕಗಳೊಂದಿಗೆ ಪದವಿ ಗಳಿಸಿದರು. ಬಾಲ್ಯದಲ್ಲಿಯೆ ರಂಗದ ಕಡೆಗೆ ಆಕರ್ಷಿತರಾದ ಇವರು ಖ್ಯಾತ ನಿರ್ದೇಶಕರಾದ ಎನ್ ಎಸ್ ವೆಂಕಟರಾಮ್, ಬಿ ಜಯಶ್ರೀ ಗರಡಿಯಲ್ಲಿ ಪಳಗಿದರು. ಬಾಲಭವನದ ಮೂಲಕ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಖ್ಯಾತ ನಿರ್ದೇಶಕ ಎಂ ವಿ ಸುಬ್ಬಣ್ಣ ಇವರ ಹೈಸ್ಕೂಲ್ ದಿನಗಳಲ್ಲಿ ರಂಗ ಪ್ರೀತಿಗೆ ನೀರೆರೆದರು. 
ಸಮುದಾಯ ರಂಗ ತಂಡವು ಸಿಜಿಕೆ ಮತ್ತು ಪ್ರಸನ್ನರ ನೇತೃತ್ವದಲ್ಲಿ ಆರಂಭಿಸಿದ ಸಾಂಸ್ಕೃತಿಕ ಜಾಥಾದಿಂದ ಪ್ರಭಾವಿತರಾಗಿ ರಂಗ ಚಳವಳಿಯ ಜೊತೆ ಗುರುತಿಸಿಕೊಂಡರು. ಎರಡನೆಯ ಜಾಥಾದಲ್ಲಿ ಭಾಗವಹಿಸಿ ಬೆಂಗಳೂರಿನ ಮೂಲೆ ಮೂಲೆಯ ಗ್ರಾಮಗಳಲ್ಲಿ ನಾಟಕದಲ್ಲಿ ಅಭಿನಯಿಸಿದರು. ಎಸ್ ಮಾಲತಿ, ಸಿ ಜಿ ಕೃಷ್ಣಸ್ವಾಮಿ ನಿರ್ದೇಶನದ ನಾಟಕಗಳಲ್ಲಿ ಇವರು ಪ್ರಧಾನ ಪಾತ್ರ ವಹಿಸಿದರು. ಇದು ಮುಂದುವರೆದು ಪದವಿ ತರಗತಿಯಲ್ಲಿರುವಾಗಲೇ ಎಮ್ ಇ ಎಸ್ ಸಂಜೆ ಕಾಲೇಜಿಗೆ ಕತ್ತಲೆ ರಾಜ್ಯ ನಾಟಕ ನಿರ್ದೇಶಿಸಿ ಪ್ರಥಮ ಪ್ರಶಸ್ತಿ ಗಳಿಸಿದರು. ಪದವಿ ಭಾಗವಾಗಿ ಎಂ ವ್ಯಾಸರ ಬೇರು ಕಥೆಯನ್ನು ರಂಗಕ್ಕೆ ಅಳವಡಿಸಿದರು.
ರಂಗ ವಿಮರ್ಶೆಗೆ ಜಿ ಎನ್ ಮೋಹನ್ ಕೊಟ್ಟ ಕೊಡುಗೆ ಅಪಾರ. ನೀನಾಸಂ ನ ತಿರುಗಾಟ, ಸಮುದಾಯದ ಸಾಂಸ್ಕೃತಿಕ ಉತ್ಸವಗಳು, ಬೆಂಗಳೂರಿನಲ್ಲಿ ಜರುಗಿದ ಬಹುತೇಕ ನಾಟಕಗಳ ವಿಮರ್ಶೆಯನ್ನು ಇವರು ಮಾಡಿದ್ದಾರೆ. ಮಾಧ್ಯಮ ಜಗತ್ತಿಗೆ ಕಾಲಿಟ್ಟ ಮೇಲೆ ರಂಗಭೂಮಿಯ ನಂಟನ್ನು ಉಳಿಸಿಕೊಂಡೇ ಬಂದಿದ್ದಾರೆ ಇಂದಿಗೂ ಕಲಾಕ್ಷೇತ್ರ, ಕೆ ಎಚ್ ಕಲಾಸೌಧ, ರಂಗಶಂಕರದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಪತ್ರಿಕೋದ್ಯಮದ ಕೆಲವೇ ಕೆಲವರಲ್ಲಿ ಜಿ ಎನ್ ಮೋಹನ್ ಸಹ ಒಬ್ಬರು.
ಬೀದಿ ನಾಟಕಗಳ ಬಗ್ಗೆ ಗಂಭೀರ ಅಧ್ಯಯನ ನಡೆಸಿ ಮೊದಲಬಾರಿಗೆ ಬೀದಿನಾಟಕಗಳ ಬೆಳವಣಿಗೆಯನ್ನು ದಾಖಲಿಸಿದ್ದಾರೆ. ಇವರ ’ಸಮೂಹದಿಂದ ಸಮೂಹಕ್ಕೆ ಬೀದಿ ನಾಟಕ’ ಪುಸ್ತಕ ಈ ದಿಸೆಯಲ್ಲಿ ಕನ್ನಡದ ಮೊದಲ ಪುಸ್ತಕ. ಈ ಪುಸ್ತಕದ ಬಗ್ಗೆ ಮಾತನಾಡುತ್ತಾ ಪುರುಷೋತ್ತಮ ಬಿಳಿಮಲೆ ಅವರು, “ಬೀದಿ ರಂಗ ಪ್ರಕಾರದ ಬಗೆಗೆ ಏನೇನೂ ಮಾಹಿತಿಗಳು ಇಲ್ಲದೇ ಇದ್ದಾಗ ಮೋಹನರು ಇಷ್ಟು ವಿಷಯಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಕೃತಿಗೆ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ“ ಎಂದು ಬರೆದಿದ್ದಾರೆ.ಪ್ರಜಾವಾಣಿಯಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲಿದ್ದ ಲಲಿತ ಕಲಾ ಸಂಘದಲ್ಲಿ ತುಂಬು ಚಟುವಟಿಕೆಯಿಂದ ತೊಡಗಿಸಿಕೊಂಡವರು. ಪ್ರಸನ್ನರ ’ತದ್ರೂಪಿ’, ನಿಸರ್ಗಪ್ರಿಯ ಅವರ ’ಬೆನಕನ ಕೆರೆ’ ನಾಟಕದಲ್ಲಿ ಪಾತ್ರ ವಹಿಸಿ ಅದನ್ನು ರಾಜ್ಯದ ಹಲವಾರು ಕಡೆ ಪ್ರದರ್ಶಿಸಿದ್ದಾರೆ. ನಾಟಕ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದರು.
ನಂತರ ಈಟಿವಿಯ ಮುಖ್ಯಸ್ಥರಾಗಿದ್ದಾಗ ಸಹ ಕರ್ನಾಟಕದ ರಂಗ ಚಟುವಟಿಕೆಗಳಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ವೇದಿಕೆ ಒದಗಿಸಿದವರು. ರಾಜಕೀಯ ಸುದ್ದಿಗಳ ತಲೆಬರಹದ ನಡುವೆ ಸಹ ರಂಗಭೂಮಿಯ ಕದಲಿಕೆಗಳನ್ನು ದಾಖಲುಗೊಳಿಸಿದ್ದರು. ಅಲ್ಲಿ ರಂಗ ಪುಸ್ತಕ ಭಂಡಾರ ಸ್ಥಾಪಿಸಿ ರಂಗಭೂಮಿಯ ಬಗ್ಗೆ ಗಂಭೀರ ಅಧ್ಯಯನವನ್ನು ಸಾಧ್ಯವಾಗಿಸಿದ್ದರು. ಇನ್ನು ಇವರು ಪ್ರಧಾನ ಸಂಪಾದಕರಾಗಿದ್ದ 'ಅವಧಿ' ಅಂತರ್ಜಾಲ ಪತ್ರಿಕೆಯಂತೂ ಕರ್ನಾಟಕದ ಎಲ್ಲಾ ರಂಗಚಟುವಟಿಕೆಗಳಿಗೆ ಮುಖಪುಟ, ರಿಹರ್ಸಲ್ ನಿಂದ ಹಿಡಿದು, ನಾಟಕದ ಸಿದ್ಧತೆ, ಪ್ರದರ್ಶನ, ಪ್ರದರ್ಶನದ ಚಿತ್ರಗಳು, ವಿಮರ್ಶೆ ಎಲ್ಲಕ್ಕೂ ಅಲ್ಲಿ ಒಂದು ಜಾಗ ಮೀಸಲು. ಅಷ್ಟೇ ಅಲ್ಲ ಮೊದಲ ಬಾರಿ ಒಂದು ವಿದ್ಯುನ್ಮಾನ ವಾಹಿನಿಯಿಂದ ನೀನಾಸಂ ರಸಗ್ರಹಣ ಶಿಬಿರಕ್ಕೆ ಶಿಭಿರಾರ್ಥಿಗಳನ್ನು ಕಳುಹಿಸಿ ಸಂಸ್ಕೃತಿಯ ರಸಗ್ರಹಣವೂ ಮಾಧ್ಯಮದ ಭಾಗವೇ ಎಂದು ಪ್ರತಿಪಾದಿಸಿದವರು.
ಸಿಜಿಕೆ, ಕೆ ವಿ ಸುಬ್ಬಣ್ಣ ಮೊದಲಾದ ರಂಗ ಚೇತನಗಳ ಶುಭಾಶಯ ಕಾರ್ಡ್ ಗಳನ್ನು ತಯಾರಿಸಿ, ವಿತರಿಸಿದ್ದು ಇವರ ರಂಗಪ್ರೇಮಕ್ಕೆ ಒಂದು ಉದಾಹರಣೆ ಮಾತ್ರ. ಇಷ್ಟೇ ಅಲ್ಲದೆ ರಂಗಭೂಮಿಯ ಬಗ್ಗೆ ಇವರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಮತ್ತು ಕೈಪಿಡಿಗಳಲ್ಲಿ ಪ್ರಕಟವಾಗಿದೆ.

https://www.facebook.com/pages/Kannada-Rangabhoomi

ಡಾ.ಡಿ.ಎಸ್.ಚೌಗಲೆ, ನಾಟಕಕಾರರು: ಸಂಸ ರಂಗ-ಸಾಹಿತ್ಯ ಪುರಸ್ಕಾರ-2014’

          ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯ ಭಾವುರಾವ ಕಾಕತಕರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ’ಕಸ್ತೂರಬಾ’, ’ಉಧ್ವಸ್ಥ’ ಅವರ ಬಹುಚರ್ಚಿತ ನಾಟಕಗಳು. ’ಉಚಲ್ಯಾ’, ಇತ್ತೀಚೆಗೆ ಬಂದ ರೂಪಾಂತರ ನಾಟಕ. ೧೯೯೮ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ’ಗಾಂಧಿ ವರ್ಸಸ್ ಗಾಂಧಿ’, ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವುಂಟು ಮಾಡಿತು. ’ಗಾಂಧಿ-ಅಂಬೇಡ್ಕರ್’, ’ಪೇಯಿಂಗ್ ಗೆಸ್ಟ್’,’ಕಿರುವಂತ’, ’ಚದುರಂಗ ಮತ್ತು ಕತ್ತೆ’, ’ಶುದ್ಧವಂಶ’ ಇವರ ಇತರ ಅನುವಾದಿತ ನಾಟಕಗಳು. ’ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಈಚೆಗೆ ಬಂದ ಕೃತಿ. ’ನೆರಳುಗಳು’ (ಕಾದಂಬರಿ), ’ನಿನ್ನ ಮೇಲೆ ಸಿಟ್ಟಿಲ್ಲ ಮಾಯಿ’, ಆಯ್ದ ಮರಾಠಿ ಕತೆಗಳು, ’ಮರಾಠಿ ಕೈದಿಗಳ ಕವಿತೆಗಳು’ಇವು ಪ್ರಮುಖ ಅನುವಾದಿತ ಕೃತಿಗಳು.
’ವಾರಸಾ’, ’ಒಡಲ ಉರಿಯ ಹೊತ್ತು’, ಚೌಗಲೆ ಕತೆಗಳು’ ಮತ್ತು ’ಜಂಗು ಹಿಡಿದ ಬ್ಲೇಡು’ ಅವರ ಕಥಾ ಸಂಕಲನಗಳು. ನಟನ ತಂಡದ’ಗಾಂಧಿ-ಅಂಬೇಡಕರ’೧೦೦ ನೇ ಪ್ರಯೋಗ ಕಂಡಿದೆ. ಈ ವರ್ಷದ ನೀನಾಸಮ್ ತಿರುಗಾಟದಲ್ಲಿ ’ಗಾಂಧಿ ವಿರುದ್ಧ ಗಾಂಧಿ’ ಪ್ರಯೋಗ ಕಾಣುತ್ತಿದೆ. ’ದಿಶಾಂತರ’ವು ಮರಾಠಿ,ಇಂಗ್ಲೀಷ್ ಗೆ ಅನುವಾದಗೊಂಡಿದೆ.ಕನ್ನಡದಲ್ಲಿ ಏಳು ಆವೃತ್ತಿ ಕಂಡಿದೆ.ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬಿ.ಎ ಕನ್ನಡ ಮೊದಲನೆ ಸೆಮಿಸ್ಟರ್ ಗೆ ಪಠ್ಯವಾಗಿದೆ. ’ಗಾಂಧಿ ವಿರುದ್ಧ ಗಾಂಧಿ’ ನಾಟಕವು ಬೆಂಗಳೂರು ವಿ.ವಿ. ಎಮ್.ಎ ಗೆ ಪಠ್ಯವಾಗಿದೆ.ರಂಗಭೂಮಿ ಹಾಗು ಚಿತ್ರಕಲೆಗೆ ಸಂಬಂಧಿಸಿದಂತೆ ಸೇರಿ ೨೫ ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.ಚಿತ್ರಕಲಾವಿದರಾದ ಇವರ ಪ್ರಮುಖ ಚಿತ್ರಕಲಾ ಪ್ರದರ್ಶನಗಳು ಬೆಂಗಳೂರು, ಮುಂಬೈ, ಪುಣೆ, ಕೊಚ್ಚಿನ್, ಚೆನ್ನೈ ಹಾಗೂ ಹೈದರಾಬಾದಿನಲ್ಲಿ ನಡೆದಿವೆ. ಚಿತ್ರಕಲೆ, ರಂಗಭೂಮಿ ಕುರಿತು ಕೃತಿಗಳನ್ನು ರಚಿಸಿರುವ ಅವರಿಗೆ ಕರ್ನಾಟಕ ನಾಟಕ ಅಕಾಡಮಿಯ ’ನಾಟಕಕಾರ ಪ್ರಶಸ್ತಿ’, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ದಿಶಾಂತರ ನಾಟಕಕ್ಕೆ ಪ್ರತಿಷ್ಠಿತ ’ಚದುರಂಗ’ ಪ್ರಶಸ್ತಿ ಮತ್ತು ’ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ’ ಸಂದಿವೆ. ಕನ್ನಡ-ಮರಾಠಿ ರಂಗಭೂಮಿ ಸೇವೆಗೆ ಮುಂಬೈ ಕರ್ನಾಟಕ ಸಂಘದ ’ವರದರಾಜ ಆದ್ಯ’ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ದಿಶಾಂತರ ನಾಟಕವು ಮರಾಠಿ ಭಾಷೆಗೆ ಅನುವಾದಗೊಂಡಿದೆ. ’ಕನ್ನಡ-ಮರಾಠಿ ಆಧುನಿಕ ರಂಗಭೂಮಿ: ತೌಲನಿಕ ಅಧ್ಯಯನ’ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿದೆ. ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ರಂಗಾಯಣ ರಂಗಸಮಾಜದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

https://www.facebook.com/pages/Kannada-Rangabhoomi
        ನಾಟಕಗಳು  ಜೀವನ ಸಂದೇಶ ನೀಡುವುದರ ಮೂಲಕ ಸಮಾಕಾಲೀನ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತದೆ. ಪ್ರಸ್ತುತ ಸಮಾಜದ ಭಯಂಕರ ಸಾಮಾಜಿಕ ಅನಿಷ್ಠವಾದ ವರದಕ್ಷಿಣೆಯ ಮಾರಕ ಪರಿಣಾಮಗಳನ್ನು ಬಿಂಬಿಸುವ, ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಾಕಷ್ಟು ರಂಗ ನಾಟಕಗಳು ಬಂದಿವೆಯಾದರೂ, ಒಂದು ಗಟ್ಟಿ ಕಥೆಯನ್ನು ಹೊಂದಿರುವ ತಾಳಿಯಲ್ಲ ನೇಣು ಪಾಶಾ ಅರ್ಥಾತ್ ತಾಳಿ ಕಟ್ಲಿಕ್ಕೂ ಕೂಲಿ ಎನ್ನುವ ನಾಟಕ ಒಂದು ಅರ್ಥ ಪೂರ್ಣ ರಂಗಾಭಿವ್ಯಕ್ತಿಗೆ ಉದಾಹರಣೆ.

ಈ ನಾಟಕ ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ ನೂರಾರು ಪ್ರಯೋಗಗಳನ್ನು ಕಂಡಿವೆ. ಎಷ್ಟು ಪ್ರಯೋಗಳಾದರೂ ಕೂಡಾ ನಿತ್ಯ ನೂತನವೆನ್ನುವಂತೆ  ರಂಗದಲ್ಲಿ ಕಾಣುವ ತಾಳಿ ಅಲ್ಲ ನೇಣು ಪಾಶಾ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷನ ದಾಷ್ಟ್ಯ, ಬಡವನ ಬದುಕನ್ನು ಆಟದ ದಾಳವನ್ನಾಗಿ ಬಳಸಿಕೊಳ್ಳುವುದನ್ನು ಯಥಾವತ್ತಾಗಿ ತಿಳಿಸುತ್ತದೆ. ಮಗನ ಮಾನವೀಯ ಕಾರ್ಯವನ್ನು ಪ್ರೋತ್ಸಾಹಿಸದ ತಂದೆ, ಸೊಸೆಯನ್ನೆ ಮುಗಿಸಲು ಸುಪಾರಿ ನೀಡುವುದು, ಬಡವನ ಬದುಕಿನಲ್ಲಿ ಕ್ಷಣಕ್ಷಣಕ್ಕೂ ಕಾಡುವ ವರದಕ್ಷಿಣೆಯ ಕ್ರೂರತೆ ನಾಟಕವನ್ನು ಗಂಭೀರತೆಯತ್ತ ಕೊಂಡ್ಯೊದರೂ, ಇಡೀ ನಾಟಕದ ಉದ್ದಕ್ಕೂ ಗಂಭೀರತೆಗಿಂತ ನವಿರು ಹಾಸ್ಯ ಜೋಡಣೆಯಿಂದ ನಾಟಕ ಪ್ರೇಕ್ಷಕರನ್ನು ಕುತೂಹಲದ ತುದಿಯಲ್ಲಿ ನಿಲ್ಲಿಸುತ್ತದೆ.
ಈ ನಾಟಕವನ್ನು ಗಣೇಶೋತ್ಸವದ ಪ್ರಯುಕ್ತ ಇತ್ತಿಚಿಗೆ ವಂಡ್ಸೆಯಲ್ಲಿ ಸ್ಥಳೀಯ ಯುವಕರು ಯಶಸ್ವಿಯಾಗಿ ಪ್ರದರ್ಶಿಸಿದರು. ದುಬಾರಿ ಸಂಭಾವನೆ ನೀಡಿ, ದೂರ ದೂರದ ಕಲಾವಿದರನ್ನು ಕರೆಸಿ ಮನೋರಂಜನಾ ಕಾರ್ಯಕ್ರಮಗಳನ್ನು ನೀಡುವುದೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ತಾಳ್ಮೆಯಿಂದ ಅಭಿನಯ ಕಲಿತು ನಾಟಕವನ್ನುಸಮರ್ಥವಾಗಿ ಅಭ್ಯವ್ಯಕ್ತಿ ಪಡಿಸಿದ ಸ್ಥಳೀಯ ಯುವಕರು ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.
ಗಟ್ಟಿ ಕಥೆ, ಕಠಿಣವಾದ ಸಂಭಾಷಣೆಗಳು, ಕ್ಲೀಷ್ಟವಾದ ಸನ್ನಿವೇಶಗಳು, ಪಾತ್ರಗಳ ಒಟ್ಟು ಔಚಿತ್ಯವನ್ನು ಬದಲಾಯಿಸುವ ದೃಶ್ಯಗಳಿಂದ ಈ ನಾಟಕ ಕಲಾವಿದರಿಗೆ ತುಸು ಕಷ್ಟವೆನಿಸಿದರೂ, ಆಸಕ್ತಿಯಿದ್ದರೆ, ನೀರು ಕುಡಿದಷ್ಟು ನೀರಾಳವಾಗಿ ಪ್ರದರ್ಶನ ನೀಡಲು ಸಾಧ್ಯ ಎನ್ನುವುದಕ್ಕೆ ಇದು ಒಂದು ಉದಾರಣೆ ಅಷ್ಟೆ. ಕಥೆಯ ಖಳನಾಯಕ ಕಾರ್ತಿಕ್ ಪಾತ್ರದಲ್ಲಿ ಹವ್ಯಾಸಿ ಕಲಾವಿದ ಮಧುಕರ ಗಾಣಿಗ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಥಾ ನಾಯಕಿ ಪೂಜಾಳ ಪಾತ್ರದಲ್ಲಿ ವಿಜೇತ್ ನಾಯ್ಕ್ ತನ್ನ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಕಥೆಯ ಜೀವಾಳವಾದ  ಉಮೇಶನ ಪಾತ್ರದಲ್ಲಿ ಮಂಜುನಾಥ ಗಾಣಿಗ,  ಅಮಿತನಾಗಿ ವಿಜಯ್, ಸೂರಜ್ ಪಾತ್ರದಲ್ಲಿ ಸಂದೇಶ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಮೂರು ಪಾತ್ರಗಳಲ್ಲಿ ದುಃಖ, ಗಂಬೀರತೆ, ತ್ಯಾಗ, ಅಸಹನೆ, ಕೋಪ ಎಲ್ಲವೂ ಇದೆ. ಅದರ ಅಭಿವ್ಯಕ್ತಿ ಉತ್ತಮ.
ನಾಟಕದಲ್ಲಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಿದ್ದು ಹಾಸ್ಯ ಪಾತ್ರಗಳು. ಶಂಭು ಶಾಸ್ತ್ರೀಯಾಗಿ ಸಭೆಯ ಮಧ್ಯದಿಂದ ಪ್ರವೇಶ ಮಾಡಿದ ಎಲ್.ಎನ್. ಆಚಾರ್ಯ ತನ್ನ ಮಾಗಿದ ಅಭಿನಯದಿಂದ ಶಹಬ್ಬಾಸ್ ಗಿರಿ ಪಡೆದರೆ, ಶಾಸ್ತ್ರಿ ಮಕ್ಕಳಾದ ಅಣ್ಣಯ್ಯ ಹಾಗೂ ರಾಮಾಚಾರಿ ಪಾತ್ರದಾರಿಗಳು ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಪಟ್ಮಂಜನಾಗಿ ಗಿರೀಶ್ ಎನ್.ನಾಯ್ಕ್ ತನ್ನ ಚುರುಕು ಅಭಿನಯದಿಂದ ಗಮನ ಸಳೆದರೆ, ಪುಟ್ಮಲ್ಲಿಯ ಪಾತ್ರದಲ್ಲಿ ಚೇತನ್, ಶ್ರೀಮಂತನ ಪಾತ್ರದಲ್ಲಿ ವಿಠಲ ಆಚಾರ್ಯ, ರಾಘವೇಂದ್ರ ಬಿಟಿ, ಸೌಮ್ಯಳ ಪಾತ್ರದಲ್ಲಿ ಪ್ರಭಾಕರ ಗಾಣಿಗ ಮೊದಲಾದ ಸಹಕಲಾವಿದರ ಪ್ರಾಮಾಣಿಕ ಪಾತ್ರ ಪೋಷಣೆ ಗಮನೀಯ. ಶಿಕ್ಷಕ ಗಣೇಶ ದೇವಾಡಿಗರ ವೃದ್ಧನ ಪಾತ್ರ, ಶಿಕ್ಷಕ ಮಂಜುನಾಥ್ ಚಂದನ್‍ರ ಅಣ್ಣಯ್ಯ ಶಾಸ್ತ್ರಿಯ ಪಾತ್ರ ನೆನಪಲ್ಲಿ ಉಳಿಯುತ್ತದೆ.
ವಾಸು ಜಿ.ನಾಯ್ಕ್ ಹಾಗೂ ದಾಮೋದರ್ ಅವರ ನಿರ್ದೆಶನ,  ದಯಾನಂದ ಆಚಾರ್ಯರ ಹಿನ್ನೆಲೆ ಸಂಗೀತ ನಾಟಕಕ್ಕೆ ಮೆರುಗು ತಂದರೆ, ಸ್ಥಳೀಯ ಹುಡುಗರ ಪ್ರಯತ್ನ ಭವಿಷ್ಯದ ರಂಗ ಸಾಧನೆಯ ಮುನ್ಸೂಚನೆ.
-ನಾಗರಾಜ್ ವಂಡ್ಸೆ
ಪತ್ರಕರ್ತರು